ಶಿರಸಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗುತ್ತಿರುವ ಶುಭ ಸಂದರ್ಭದಲ್ಲಿ ಚಳಿ-ಮಳೆ-ಗಾಳಿಯನ್ನು ಲೆಕ್ಕಿಸದೇ ಗಡಿಯಲ್ಲಿ ಹಗಲಿರುಳು ಜೀವದ ಹಂಗು ತೊರೆದು ಜನರ ರಕ್ಷಣೆಗೆ ಕಟಿಬದ್ಧರಾಗಿರುವ ದೇಶಕಾಯುವ ಯೋಧರಿಗೆ ಆತ್ಮಸ್ಥೈರ್ಯ ಹಾಗೂ ಅಭಿನಂದನಾಪೂರ್ವಕವಾಗಿ ಅವರ ಕಾರ್ಯಕ್ಕೆ ಗೌರವ ಸಲ್ಲಿಸುವ ವಿನೂತನ ಕಾರ್ಯವನ್ನು ಎಂ.ಎಂ.ಕಾಲೇಜಿನ ವತಿಯಿಂದ ಮಾಡಲಾಗುತ್ತಿದೆ.
ಸೈನಿಕರ ತ್ಯಾಗದ ಕುರಿತಾಗಿ ವಿದ್ಯಾರ್ಥಿಗಳು ರಚಿಸಿರುವ ಕಥೆ-ಕವನ- ಚಿತ್ರ ಹಾಗೂ ತಮ್ಮ ಮನದಾಳದ ಮಾತುಗಳನ್ನು ಸೈನಿಕರಿಗೆ ತಲುಪಿಸುವ ಕಾರ್ಯವನ್ನು ಕಾಲೇಜಿನ ವತಿಯಿಂದ ಮಾಡಲಾಗಿದ್ದು ಈ ಮೂಲಕ ತಮ್ಮ ಜೀವನವನ್ನು ಲೆಕ್ಕಿಸದೇ ದೇಶಕ್ಕಾಗಿ ಹೋರಾಡುತ್ತಿರುವ ಯೋಧರನ್ನು ಸ್ಮರಿಸುವ ಕೆಲಸ ಮಾಡಲಾಗುತ್ತಿದೆ.
ತಮ್ಮ ಜೀವನವನ್ನು ದೇಶದ ಸಲುವಾಗಿ ಮುಡಿಪಾಗಿಟ್ಟು ನಾವು ಸುರಕ್ಷಿತವಾಗಿ ಜೀವನ ನಡೆಸಲು ಕಾರಣೀಕರ್ತರಾದ ಯೋಧರ ತ್ಯಾಗವನ್ನು ಸ್ಮರಿಸಬೇಕಾಗಿರುವುದು ಪ್ರತಿಯೊಬ್ಬ ದೇಶವಾಸಿಯ ಕರ್ತ್ಯವ್ಯ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮನದಾಳದಲ್ಲಿರುವ ಯೋಧರ ಕುರಿತಾಗಿನ ಗೌರವದ ಭಾವನೆಯನ್ನು ಕಥೆ-ಕವನ- ಚಿತ್ರಗಳ ಹಾಗೂ ಅವರಿಗೆ ಮನದಾಳದ ಮಾತುಗಳನ್ನು ಪತ್ರಗಳ ಮೂಲಕ ತಲುಪಿಸಿ ಯೋಧರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಅವರಿಗೆ ಆತ್ಮಸ್ತೈರ್ಯ ತುಂಬುವ ಕೆಲಸವನ್ನು ಕಾಲೇಜಿನ ವತಿಯಿಂದ ಮಾಡಲಾಗುತ್ತಿದೆ ಎಂದು ಕಾಲೇಜಿನ ಪ್ರಾಚಾರ್ಯೆ ಡಾ.ಕೋಮಲಾ ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.